ನಾವೆಲ್ಲರೂ ಕಾತುರದಿಂದ ಕಾಯುತ್ತಿದ್ದ "ಸಿಂಗಾರ ಸಿರಿಯೇ..." ಎನ್ನುವ ಸಂಗೀತಮಯ ಕಾರ್ಯಕ್ರಮಕ್ಕಾಗಿ. ಸಂಗೀತದ ಹೊನಲು, ನೀ ಅರಿಯೇ... ಎಂಬ ಟ್ಯಾಗ್ ಲೈನಲ್ಲಿ ಬೇರೆ ಪ್ರಚಲಿತಗೊಂಡಿದ್ದರಿಂದ, ಕನ್ನಡ ಹಾಡುಗಳ ಹೊನಲನ್ನು ಹರಿಸಲು ಕರ್ನಾಟಕದಿಂದ ಝೀ ಸರಿಗಮಪ ಖ್ಯಾತಿಯ ಶ್ರೀಹರ್ಷ ಹಾಗು ಅಂಕಿತಾ ಕುಂಡು ಅವರ ಅಮೋಘ ಗಾಯನಕ್ಕೆ ಜೊತೆಯಾಗಿ ಕರ್ನಾಟಕದ ಪ್ರಸಿದ್ಧ ಏಕೈಕ ಲೇಡಿ ಡ್ರಮ್ಮರ್ ಡಾ.ಪ್ರಿಯಾ, ಕೀಬೋರ್ಡ್ನಲ್ಲಿ ವೀರೇಶ್ ಹಾಗು ಪ್ರಸಿದ್ಧ ವಾದ್ಯಗಾರ ಶಿವಮಲ್ಲು ಅವರು ಆಗಮಿಸಿದ್ದು ಎಲ್ಲರ ಕುತೂಹಲವನ್ನು ಹೆಚ್ಚಿಸಿತ್ತು.
ಶ್ರೀಹರ್ಷ ಮತ್ತು ಅಂಕಿತಾ ಕುಂಡು ಅವರ ಅಮೋಘ ಗಾಯನ
ಶ್ರೀ ಹರ್ಷ ಮತ್ತು ಅಂಕಿತಾ ಕುಂಡು ತಮ್ಮ ಸಹ ವಾದ್ಯವೃಂದದೊಂದಿಗೆ ಸೃಷ್ಟಿಸಿದ ಆ ಮನಮೋಹಕ ವಾತಾವರಣ ವರ್ಣಿಸಲಸಾಧ್ಯ. ವೇದಿಕೆಯು ರಂಗು ರಂಗಾಗಿ, ಗಾಯನದಲ್ಲಿ ಇಡಿಯಾಗಿ ಬೆಳಕಿನೊಡನೆ ಆಟದಲ್ಲಿ ತೊಡಗಿದಂತೆ ಭಾಸವಾಗಿದ್ದರೆ, ಪ್ರೇಕ್ಷಕರೆಲ್ಲರೂ ಮೆಲೋಡಿ ಹಾಡುಗಳಲ್ಲಿ ಮುಳುಗಿ ತಮ್ಮ ಹಳೆಯ ನೆನಪುಗಳಲ್ಲಿ ತೇಲುತ್ತಿದ್ದರು. ಹಳೆಯ ಹಾಡುಗಳ ಮಧುರತೆ, ಕೆಲವು ಹೊಸ ಹಾಡುಗಳ ರಮ್ಯತೆಯ ಮಿಲನದಲ್ಲಿ ಮಿಂದು ಮೆಲ್ಲನೆ ತಮಗರಿಯದಂತೆ ಕಾಲುಗಳು ತಾಳಕ್ಕೆ ಕುಣಿಯುತ್ತಿದ್ದವು, ಮನವು ಕೂಡ ಎಲ್ಲ ಮರೆತು ಹಾಡುಗಳನ್ನು ಗುನುಗುನಿಸುತಿತ್ತು. ಇನ್ನು ಕೆಲವು ಕಡೆ ಪ್ರೇಕ್ಷಕರನ್ನು ಕೂಡ ಜೊತೆ ಸೇರಿ ಹಾಡುವಂತೆ ಮಾಡಿದ್ದು ಮೆಲ್ಲನೆ ಇಡೀ ಸಭಾಂಗಣವೇ ವೇದಿಕೆಯಾಗಿ ಬದಲಾಗಿತ್ತು. ಸುಮಾರು ಒಂದು ಗಂಟೆಗೂ ಮೀರಿ ಸುಮಧುರ ಹಾಡುಗಳನ್ನು ಹಾಡಿ ರಂಜಿಸಿ, ಕೆಲವು ರಾಗಾಧಾರಿತ ಹಳೆಯ ಕನ್ನಡ, ಅನ್ಯಭಾಷೆಯ ಹಾಡುಗಳ ಸಮ್ಮಿಲನದ ಹಾಡುಗಳನ್ನು ಜೊತೆಯಾಗಿ ಹೆಣೆದು ಪ್ರಸ್ತುತ ಪಡಿಸಿದರು. ಅಂಕಿತಾ ಕುಂಡು ಅವರ ಅಮೋಘವಾದ ಕೆಲವು ಮಧುರ ಗಾಯನದ ಹಾಡುಗಳು ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿಸಿದ್ದು ಸದೃಶ್ಯವಾಗಿದ್ದು, ಶ್ರೀಹರ್ಷ ಅವರ ವೈವಿಧ್ಯಮಯ ಹಾಡುಗಳ ಸರಮಾಲೆ, ಅವರ ನಿರಂತರ ಪ್ರದರ್ಶನೀಯ ಅಭಿವ್ಯಕ್ತಿ ಎದ್ದು ಕಂಡು ಪ್ರೇಕ್ಷಕರನ್ನು ನಿಜಕ್ಕೂ ಸಂಗೀತದ ಹೊನಲಲ್ಲಿ ಮೆಲ್ಲನೆ ಹರಿಬಿಟ್ಟಂತಿತ್ತು. ವಾದ್ಯವೃಂದವಂತೂ ಎಡಬಿಡದೆ ಮೂರು ತಾಸುಗಳ ಕಾಲ ಸತತ ಮನರಂಜನೆಯ ಉತ್ತುಂಗದಲ್ಲಿ ಪ್ರೇಕ್ಷಕರನ್ನು ಸೆರೆಹಿಡಿಯುವಲ್ಲಿ ಡಾ.ಪ್ರಿಯಾ ಅವರ ಡ್ರಮ್ಸ್, ಶಿವಮಲ್ಲು ಅವರ ತಮಟೆ, ಕಾಂಗೋ ಹಾಗು ವೀರೇಶ್ ಅವರ ಕೀಬೋರ್ಡ್ನ ಕೈಚಳಕ ಯಶಸ್ವಿಯಾಗಿತ್ತೆಂದರೆ ಸುಳ್ಳಾಗಲಾರದು.