ಸಿಂಗಾರ ಕ್ರೀಡಾ ಸಂಜೆ ಕಾರ್ಯಕ್ರಮವನ್ನು ೧೦ ಜನವರಿ ೨೦೨೦ನೇ ತಾರೀಖಿಗೆ ನಮ್ಮ ಕನ್ನಡ ಸಂಘ (ಸಿಂಗಪುರ)ವು ಬಿಷಾನ್ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿತ್ತು. ನಮ್ಮ ದೇಸಿ ಕ್ರೀಡೆಯ ಸೊಗಡಿನ ರುಚಿಯನ್ನು ನಮ್ಮ ಸಿಂಗನ್ನಡಿಗರಿಗೆ ಉಣಬಡಿಸೋ ಉದ್ದೇಶ ನಮ್ಮದಾಗಿತ್ತು. ಅದರ ಜೊತೆಗೆ ಮಕರ ಸಂಕ್ರಾಂತಿ ಹಬ್ಬ ಆಚರಿಸುವುದು, ಹಬ್ಬದ ಊಟದೊಂದಿಗೆ ಆಟ ಅನ್ನೋ ಪರಿಕಲ್ಪನೆ ಆಗಿತ್ತು.
ಕನ್ನಡ ಸಂಘದ ಅಧ್ಯಕ್ಷೆ ರಶ್ಮಿ ಉದಯಕುಮಾರ್ ಅವರಿಂದ ಉದ್ಘಾಟನಾ ಭಾಷಣದೊಂದಿಗೆ ಕ್ರೀಡಾ ಸಂಜೆ ಶುರುವಾಯಿತು.
ಚಂಡೆ ವಾದ್ಯ ಹಾಗು ಯೋಗ ಗುರು ಸುಬ್ರಮಣ್ಯ ಭಟ್ಟರು ಹೇಳಿಕೊಟ್ಟ ಯೋಗಾಸನದ ಆಸನಗಳನ್ನು ಮಾಡಿ ಎಲ್ಲಾ ಸಿಂಗನ್ನಡಿಗರು ಸ್ಪರ್ಧೆಗೆ ಸಜ್ಜಾದರು. ಮೊದಲಿಗೆ ೧೦೦ ಮೀಟರ್ ಓಟದೊಂದಿಗೆ ಪಂದ್ಯಾವಳಿ ಶುರು ಆಯಿತು, ೧೦೦ ಮೀಟರ್ ಆದಮೇಲೆ ೨೦೦ ಮೀಟರ್ ಓಟ, ಗೋಣಿಚೀಲದ ಓಟ ಹೀಗೆ ಒಂದಾದ ಮೇಲೊಂದು ಆಟಗಳು ನಡೆದವು. ತದನಂತರ ನಿಂಬೆ ಹಣ್ಣಿನ ಓಟ, ನಂತರ ಉದ್ದ ಜಿಗಿತ, ಕಬಡ್ಡಿ, ಖೋ ಖೋ ಸ್ಪರ್ಧೆ ನೆರೆವೇರಿತು. ಸಿಂಗನ್ನಡಿಗರು ಮಾಡಿಕೊಂಡು ಬಂದ ಖಡಕ್ ರೊಟ್ಟಿ, ಗುರೆಳ್ಳುಪುಡಿ, ಚಟ್ನಿ, ಶೇಂಗಾ ಚಟ್ನಿ, ಹೆಸರಕಾಳು ಪಲ್ಯ, ಮೊಸರು, ಕರದೆಂಟು, ಸಮೋಸಾ, ಬಜ್ಜಿ, ಇಡ್ಲಿ, ವಡೆ, ಮಜ್ಜಿಗೆ, ಮೊಸರನ್ನ, ಬಿಸಿಬೇಳೆಬಾತು, ಪಾಯಸ ಎಲ್ಲವನ್ನು ಸಿಂಗನ್ನಡಿಗರು ಸವಿದರು. ಕೊನೆಯಲ್ಲಿ ಕ್ರೀಡೆಗಳಲ್ಲಿ ವಿಜೇತರಾದವರಿಗೆ ಪ್ರಶಸ್ತಿ ನೀಡಲಾಯಿತು. ಒಟ್ಟಾರೆಯಾಗಿ ನಮ್ಮ ಕನ್ನಡ ನಾಡಿನ ದೇಸಿ ಕ್ರೀಡೆಯ ಗತವೈಭವವನ್ನು ನಮ್ಮ ಸಿಂಗನ್ನಡಿಗರಿಗೆ ಪರಿಚಯಿಸುವ ಪ್ರಯತ್ನ ಯಶಸ್ವಿಯಾಯಿತು.