ಕನ್ನಡ ಸಂಘ (ಸಿಂಗಪುರ)ದ ನೂತನ ಕಾರ್ಯಕಾರಿ ಸಮಿತಿಯು ಚಂದ್ರಮಾನ
ಹೊಸ ವರ್ಷದ ಆಗಮನಕ್ಕೆ ಮಧುರ ಗಾನ ಹಾಗು ಅಣಕ ಹಾಸ್ಯವನ್ನೊಳಗೊಂಡ "ಇಂಚರ" ಕಾರ್ಯಕ್ರಮವನ್ನು
೨೬ ಮೇ ೨೦೧೯ ರಂದು ಸ್ಪ್ರಿಂಗ್ ಸಭಾಂಗಣದಲ್ಲಿ ಸಂಯೋಜಿಸಿತ್ತು. ಮಜಾ ಟಾಕೀಸ್ ಪ್ರಖ್ಯಾತಿಯ 'ವರಲಕ್ಷ್ಮಿ’
ಕನ್ನಡ ದೂರದರ್ಶನ ಚಂದನ ವಾಹಿನಿಯ ನಿರೂಪಕಿ, ಕನ್ನಡ ಕಿರುತೆರೆ ನಟಿ, ತಮ್ಮ ಅನವದ್ಯ ವಾಕ್ಸರಣಿಗೆ
ಪ್ರಸಿದ್ಧರಾದ ಅಪರ್ಣಾ ವಸ್ತಾರೆಯವರ ನಿರೂಪಣೆಯಿಂದ ಸಂಗೀತ ಸಂಜೆ ಆರಂಭವಾಯಿತು. ‘ಜೋಗಿ’ ಪ್ರಖ್ಯಾತಿಯ
ಗಾಯಕಿ ಸುನಿತಾ, ಕನ್ನಡ ಕೋಗಿಲೆ ಕಾರ್ಯಕ್ರಮದ ಫೈನಲಿಸ್ಟ್ ಗಣೇಶ್ ಕಾರಂತ್, ಸೆಮಿ-ಫೈನಲಿಸ್ಟ್ ಸುರಕ್ಷಾ
ದಾಸ್ "ಯುಗ ಯುಗಾದಿ ಕಳೆದರು" ಕವಿತೆಯಿಂದ ಗಾನ ಸಂಜೆಯ ನಾಂದಿ ಹಾಡಿದರು. ಸಂಜೆಯ ಸಂಗೀತಕ್ಕೆ
ಕೀಬೋರ್ಡ್ ವಾದನದಲ್ಲಿ ಉಮಾಶಂಕರ್ ಹಾಗು ರಿಧಂ ಪ್ಯಾಡ್ ನಲ್ಲಿ ಶ್ರೀನಿವಾಸ್ ವಾದ್ಯವೃಂದದಲ್ಲಿ ನೆರವು
ನೀಡಿದರು. ಮಿಮಿಕ್ರಿ ಗೋಪಿ ಎಂದು ಜನಪ್ರಿಯರಾದ ಗೋಪಾಲ್. ಎಚ್. ಕನ್ನಡ ರಂಗಭೂಮಿ, ದೂರದರ್ಶನ ಮತ್ತು
ಚಲನಚಿತ್ರ ನಟ. ಕನ್ನಡ ಚಿತ್ರರಂಗದ ಜನಪ್ರಿಯ ನಟ, ಖಳ ನಟ ಹಾಗು ಹಾಸ್ಯ ನಟರಾದ ಡಾ. ರಾಜಕುಮಾರ್, ವಿಷ್ಣುವರ್ಧನ್,
ಅಂಬರೀಷ್, ಪ್ರಭಾಕರ್, ದಿನೇಶ್, ಮುಸರಿ ಕೃಷ್ಣಮೂರ್ತಿ, ಎನ್ ಎಸ್ ರಾವ್, ದೊಡ್ಡಣ್ಣ ಹೀಗೆ ಹೆಸರಿಸಲು
ಕೆಲವರನ್ನು ಅಣಕದಿಂದ ಅನುಕರಿಸಿ ಎಲ್ಲರನ್ನು ಹೊಟ್ಟೆ ಹುಣ್ಣಾಗುವಷ್ಟು ನಗಿಸಿದ ಅವರಿಗೆ ಚಪ್ಪಾಳೆಯ
ಸುರಿಮಳೆ ಧಾರಾಕಾರವಾಗಿ ಸುರಿಯಿತು. ಅವರ ಪ್ರತಿಭೆಯು ನಟರಿಗೆ ಸೀಮಿತವಾಗದೆ ರಾಜಕೀಯ ನಾಯಕರನ್ನು ಕುಚೋದ್ಯದ
ಪರಿಹಾಸ್ಯಕ್ಕೆ ಒಳಪಡಿಸಿ ಪ್ರೇಕ್ಷಕರನ್ನು ಕೇಕೆ ಹಾಕಿ ನಗುವಂತೆ ಮಾಡಿ ಹಾಸ್ಯ ಸಂಜೆಗೆ ಥಳಕು ತುಂಬಿದರು.