ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಕನ್ನಡ ಸಂಘ ಸಿಂಗಪುರವು ವಚನಾಂಜಲಿ ಕಾರ್ಯಕ್ರಮವನ್ನು ದಿನಾಂಕ ೧೭ ಅಕ್ಟೋಬರ್ ೨೦೨೦ರಂದು ಹಮ್ಮಿಕೊಂಡಿತ್ತು. ಈ ವರ್ಷದ ವಚನಾಂಜಲಿಯು ಮೊದಲ ಬಾರಿಗೆ ZOOM ಮುಖಾಂತರ ಯಾವುದೇ ಅಡೆ ತಡೆಗಳಿಲ್ಲದೆ ಯಶಸ್ವಿಯಾಗಿ ಜರಗಿತು. ಮುಖ್ಯ ಕಾರ್ಯಕ್ರಮವನ್ನು ನಿರೂಪಕಿಯಾದ ಶ್ರೀಮತಿ ಸರಸ್ವತಿ ಸಾಮಗರವರು ವಚನದೊಂದಿಗೆ ಚಾಲನೆ ಮಾಡಿದರು. ಮುಂದೆ, ಶ್ರೀಮತಿ ರೇಣುಕ ಅವರಿಂದ ರಚಿಸಲ್ಪಟ್ಟ ಒಂದು ಸುಮಧುರ ವಚನ ಗಾಯನದೊಂದಿಗೆ ಡಾ. ಭಾಗ್ಯ ಮೂರ್ತಿಯವರು ವಚನಾಂಜಲಿ -೨೦೨೦ಕ್ಕೆ ಜೀವ ತುಂಬಿದರು.
ವಿದುಷಿ ಪ್ರತಿಮಾ ಬೆಳ್ಳಾವೆ ಮತ್ತು ಡಾ. ಭಾಗ್ಯಮೂರ್ತಿರವರ ಸಂಯೋಜನೆಯಲ್ಲಿ ನಮ್ಮ ಕಿರಿಯ ಹಾಗು ಹಿರಿಯ ಸಿಂಗನ್ನಡಿಗರು ಕೂಡ ಅದ್ಭುತವಾಗಿ ವಚನಗಳಿಗೆ ಹಾಡಿ ಕಾರ್ಯಕ್ರಮದ ಶೋಭೆಯನ್ನು ಹೆಚ್ಚಿಸಿದರು. ಈ ವರ್ಷದ ವಚನಾಂಜಲಿಯ ಮುಖ್ಯ ಅತಿಥಿಗಳಾದಂತಹ, ಕರ್ನಾಟಕದಾದ್ಯಂತ ಚಿರಪರಿಚಿತರಾದ ಡಾ. ಗುರುರಾಜ ಕರಜಗಿಯವರು ‘ವಚನದೊಳ್ ಆತ್ಮವಿಶ್ವಾಸ’ ಎಂಬ ಶೀರ್ಷಿಕೆಯಡಿಯಲ್ಲಿ ಮಾತನಾಡಲಾರಂಭಿಸಿದರು. ವಚನಗಳಲ್ಲಡಗಿರುವ ತಾತ್ಪರ್ಯದಿಂದ ನಾವೆಲ್ಲಾ ಹೇಗೆ ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಳ್ಳಬಹುದು ಎಂದು ಅವರ ಅಮೋಘ ವಾಕ್ ಚಾತುರ್ಯದಿಂದ ಮನವರಿಕೆ ಮಾಡಿಕೊಟ್ಟ ಪರಿ ಎಂದೂ ಸ್ಮರಣೀಯ. ಅವರ ಮನ ತಟ್ಟುವ ಪ್ರವಚನದ ನಂತರ, ಡಾ. ಗುರುರಾಜ ಕರಜಗಿಯೊಂದಿಗೆ ಪ್ರಶ್ನೋತ್ತರ ಭಾಗವನ್ನು ಸಂಘದ ಕಾರ್ಯಕಾರಿ ಸಮಿತಿಯ ಸದಸ್ಯರಾದ ಶ್ರೀ ಪ್ರಮೋದ ನಾಯಕವಾಡಿಯವರು ಸಾರ್ಥಕವಾಗಿ ನಿರ್ವಹಿಸಿದರು. ಮುಂದೆ, ವಚನ ಪಠಣ ಸ್ಪರ್ಧೆಯ ವಿಜೇತರನ್ನು ಘೋಷಿಸಲಾಯಿತು. ಮೊದಲನೇ ಬಹುಮಾನ ಪಡೆದವರ ವಚನ ಪಠಣ ವೀಡಿಯೋಗಳನ್ನು ಪ್ರದರ್ಶಿಸಲಾಯಿತು. ಈ ವಚನ ಆಧಾರಿತ ನೃತ್ಯಗಳು, ವಿದುಷಿಗಳಾದ ಡಾ. ಸಿರಿ ರಾಮ ಮತ್ತು ಡಾ ಶ್ರೀಲಕ್ಷ್ಮಿ ರವರಿಂದ ಸಂಯೋಜಿಸಲ್ಪಟ್ಟು, ಅವರ ಶಿಷ್ಯ ತಂಡದವರು ಪ್ರಸ್ತುತ ಪಡಿಸಿದರು.