೨೧ ನವೆಂಬರ್ ೨೦೨೦ರಂದು ದೀಪೋತ್ಸವ ಕಾರ್ಯಕ್ರಮವನ್ನು Zoom ಮೂಲಕ ಪ್ರಸ್ತುತ ಪಡಿಸಲಾಯಿತು. ಕಾರ್ಯಕಾರಿ ಸಮಿತಿಯ ಸದಸ್ಯರೆಲ್ಲ ಸೇರಿ ಸದ್ಯದ ಕರೋನಾ ಪರಿಸ್ಥಿತಿಯಿಂದ ಆಗುತ್ತಿರುವ ಅಡಚಣೆಗಳ ಬಗ್ಗೆ ರೂಪಕವನ್ನು ಪ್ರಸ್ತುತಪಡಿಸಿದರು.
ನಂತರ ಕನ್ನಡ ಹಬ್ಬದ ಸಂಭ್ರಮಕ್ಕೆ ಕಾತುರದಿಂದ ಕಾಯುತ್ತಿದ್ದ ಸಿಂಗನ್ನಡಿಗರೆಲ್ಲರಿಗೂ ಮತ್ತು ಮಂಜು ಡ್ರಮ್ಸ್ ಕಲೆಕ್ಟಿವ್ ತಂಡದವರನ್ನು ವರ್ಚುವಲ್ ಮುಖಾಂತರ ಸಂಘದ ಅಧ್ಯಕ್ಷರಾದ ರಶ್ಮಿ ಉದಯಕುಮಾರರವರು ಸ್ವಾಗತಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ವಿಘ್ನ ನಿವಾರಕ ವಿಘ್ನೇಶ್ವರನ ಶ್ಲೋಕದೊಂದಿಗೆ ಕಾರ್ಯಕ್ರಮ ಆರಂಭವಾಯಿತು ಕೋಗಿಲೆ ಕಂಠದ ಅನುರಾಧ ಭಟ್ ರವರು "ಕೇಳಿಸದೆ ಕಲ್ಲು ಕಲ್ಲಿನಲಿ ಕನ್ನಡ ನುಡಿ" ಎಂಬ ಅದ್ಭುತ ಗೀತೆಯೊಂದಿಗೆ ಸಂಗೀತ ಸಂಜೆಯನ್ನು ಆರಂಭಿಸಿದರು ಜೊತೆಗೆ ಯುವ ಗಾಯಕ ವಾಸುಕಿ ವೈಭವ್ ರವರು "ಗಜವದನ ಹೇ ರಂಭ" ಎಂಬ ರಂಗಗೀತೆಯೊಂದಿಗೆ ದೀಪೋತ್ಸವಕ್ಕೆ ಮತ್ತಷ್ಟು ಮೆರುಗನ್ನ ತಂದರು. ಅದೇ ಶೈಲಿಯ ಇನ್ನೊಂದು ಗೀತೆಯಾದ "ಹೇಳು ಪಾರ್ಥ ಹೇಳು ಕೃಷ್ಣ" ಹಾಡು ಸಿಂಗನ್ನಡಿಗರೆಲ್ಲರ ಮೈನವಿರೇಳುವಂತೆ ಮಾಡಿದ್ದಂತು ನಿಜ.
ಮಂಜು ಡ್ರಮ್ಸ್ ಹಾಗೂ ಭಾವನಾ ವಿಶ್ವನಾಥ್ ಮತ್ತು ಕಾವ್ಯ ರಾಮಚಂದ್ರರವರು ಪ್ರಸ್ತುತ ಪಡಿಸಿದ ಹಿಂದೂಸ್ತಾನಿ ಸಂಗೀತದ ಜೊತೆ ಕಥಕ್ ನೃತ್ಯದ ಮಿಶ್ರಣ ಸಿಂಗನ್ನಡಿಗರ ಕಣ್ಮನಸೆಳೆಯಿತು. ದೀಪೋತ್ಸವದಲ್ಲಿ ಇತ್ತೀಚೆಗೆ ನಮ್ಮನ್ನಗಲಿದ ಸ್ವರ ಸಾಮ್ರಾಟ ಎಸ್ ಪಿ ಬಾಲಸುಬ್ರಮಣ್ಯಮ್ ಹಾಗೂ ರಾಜನ್ ರವರಿಗೆ ನಮನ ಸಲ್ಲಿಸಲಾಯಿತು. ಅನುರಾಧ ಭಟ್ ಹಾಗೂ ಮಂಜುರವರು ಎಸ್ ಪಿ ಬಿ ಜೊತೆಗಿನ ತಮ್ಮ ಸವಿ ನೆನಪುಗಳನ್ನು ಮೆಲುಕು ಹಾಕಿದರು. ಎಸ್ ಪಿ ಬಾಲಸುಬ್ರಮಣ್ಯಮ್ ಹಾಗೂ ರಾಜನ್ ರವರ ಅನೇಕ ಗೀತೆಗಳನ್ನು ಹಾಡಿ ಸಿಂಗನ್ನಡಿಗರಿಗೆ ಹಳೆಯ ಹಾಡಿನ ಸೊಗಡನ್ನು ಉಣಬಡಿಸಿದರು .
ದೈವತ್ವದಿಂದ ಪ್ರಾರಂಭವಾಗಿ ಭಾವಗೀತೆ, ಜಾನಪದ, ಹಳೆಯ ಹಾಗೂ ಹೊಸ ಚಿತ್ರ ಗೀತೆಗಳನ್ನು ಪ್ರಸ್ತುತ ಪಡಿಸುವ ಮೂಲಕ ಸಂಗೀತ ಕಲಾವಿದರೆಲ್ಲ ಇಳಿ ಸಂಜೆಯ ಸೂರ್ಯನ ತಿಳಿ ಕಿರಣಗಳು ಭೂಮಿಗೆ ಸ್ಪರ್ಶಿಸುವಂತೆ ನಮ್ಮೆಲ್ಲೆರ ಮನಸ್ಸಿಗೆ ಸಂಗೀತದ ಸುಧೆಯನ್ನು ಉಣಬಡಿಸಿದರು. ಪ್ರಮುಖ ಘಟ್ಟ ತಲುಪಿದ ಕಾರ್ಯಕ್ರಮ ಶಿಕ್ಷಣ, ಕಲೆ, ಸಾಹಿತ್ಯ, ಕ್ರೀಡೆ ಹಾಗೂ ಇನ್ನಿತರೆ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಿಂಗನ್ನಡಿಗರಿಗೆ ಸಿಂಗಾರ ಪುರಸ್ಕಾರ, ಸಿಂಗಾರ ಅವಧಾನಿ ಪುರಸ್ಕಾರ, ಸಿಂಗಾರ ನಾಟ್ಯರಂಜನಿ, ಚಾಣಕ್ಯ, ಆರ್ಯಭಟ, ಹಾಗೂ ಎ. ಏನ್. ರಾವ್ ಸಿಂಗಾರ ಪುರಸ್ಕಾರವನ್ನು ನೀಡುವ ಮೂಲಕ ಮತ್ತಷ್ಟು ಸಾಧನೆ ಮಾಡುವಂತೆ ಪ್ರೇರೇಪಿಸಲಾಯಿತು.