೧೦ ನವೆಂಬರ್ ೨೦೧೯ ರಂದು, ಸಿಂಗಪುರದ GIIS ನಲ್ಲಿನ ಸಭಾಂಗಣದ ಬಣ್ಣ, ಆಕಾರ, ರೂಪವೇ ಬದಲಾಗಿ ಹೋಗಿತ್ತು, ಕನ್ನಡ ಕಲಿ ಮಕ್ಕಳಿಂದ ಪ್ರಾರ್ಥನೆ ಗೀತೆ "ಕನ್ನಡ ಎನುವುದು ಜೀವನದಿ, ಗಿರಿವನ ಸಂಪದ ಎರಡು ಬದಿ" ಎಂದು ಸುಶ್ರಾವ್ಯವಾಗಿ ಮಕ್ಕಳೆಲ್ಲರೂ ಹಾಡಿ ಕನ್ನಡಮ್ಮನ ಉತ್ಸವಕ್ಕೆ ಚಾಲನೆ ನೀಡಿದರು. ಕನ್ನಡ ರಾಜ್ಯೋತ್ಸವದ ಸಂಭ್ರಮದಲ್ಲಿ ಸಿಂಗಾರ ಪುರಸ್ಕಾರಗಳನ್ನು ನೀಡುವುದು ವಾಡಿಕೆ. ಶೈಕ್ಷಣಿಕ, ಕ್ರೀಡೆ ಹಾಗೂ ಪಠ್ಯೇತರ ಕ್ಷೇತ್ರಗಳಲ್ಲಿನ ಸಾಧನೆಗಳನ್ನು ಗುರುತಿಸಿ ಪ್ರೋತ್ಸಾಹಿಸುವುದು ಸಂಘಕ್ಕೆ ಹೆಮ್ಮೆಯ ವಿಷಯ. "ಕನ್ನಡಕೊಬ್ಬನೇ ಕೈಲಾಸಂ" ಎನ್ನುವುದು ನಾಣ್ಣುಡಿಯಲ್ಲ, ನಿಜಾಂಶ. "ಕನ್ನಡ ಕವಿ ತಿಲಕಂ ಗುಂಡಂ” “ಕವಿ ಮಂಡಲಾಗ್ರೇಸರ ಚಂಡ, ಪ್ರಚಂಡ ಗುಂಡೂ” ‘ಕನ್ನಡ ಪ್ರಹಸನ ಪ್ರಪಿತಾಮಹ ಕೈಲಾಸಂ” ಎಂದು ಸ್ವಯಂ ಘೋಷಿಸಿಕೊಂಡ ಕೈಲಾಸಂ ನಾಟಕಗಳ ಡೈಲಾಗುಗಳನ್ನು ಪ್ರಸ್ತುತ ಪಡಿಸುತ್ತಾ "ಕೈಲಾಸಂಸಾರ"ವನ್ನು ಸುಂದರ್ ಹಾಗೂ ವೀಣಾ ಸುಂದರ್ ಅವರು ತಮ್ಮ ಅದ್ಭುತವಾದ ರಂಗ ಪ್ರಯೋಗವನ್ನು ಪ್ರಸ್ತುತಪಡಿಸಿದರು. ಹಿರಿಯ ಸಿಂಗನ್ನಡಿಗರ ಅತ್ತುತ್ಯಮ ಸಾಧನೆಯನ್ನು ಗುರುತಿಸಿ ನೀಡುವ "ಸಿಂಗಾರ ಸಾಧನಾ ಪುರಸ್ಕಾರ"ವನ್ನು ಈ ವರ್ಷ ಹೆಮ್ಮೆಯ ಸಿಂಗನ್ನಡಿಗರಾದ ಡಾ. ದಿನೇಶ್ ಕೋಕಲ್ ಅವರಿಗೆ ಕನ್ನಡ ಸಂಘ (ಸಿಂಗಪುರ)ದ ಅಧ್ಯಕ್ಷೆ ರಶ್ಮಿ ಉದಯಕುಮಾರ್ ಅವರು ನೀಡಿ ಗೌರವಿಸಿದರು. ಕಾರ್ಯಕ್ರಮದ ಕೊನೆಯ ಹಂತದ ಅದ್ಧೂರಿಯ ಕಾರ್ಯಕ್ರಮ ನಡೆದಾಡುವ ವಯೊಲಿನಿಸ್ಟ್ ಎಂದೇ ಪ್ರಖ್ಯಾತರಾದ ಡಾ. ಅನೀಶ್ ವಿದ್ಯಾಶಂಕರ್ ಅವರ "ಭಾವಪರವಶ"ವನ್ನು ವೀಕ್ಷಿಸಲು, ಲಾಲಿಸಲು ಕಾಯುತ್ತಿದ್ದ ಕ್ಷಣ ಕೊನೆಗೂ ಬಂದೇ ಬಿಟ್ಟಿತು. ತಮ್ಮ ವಯಲಿನ್ ನಾದದ ಗುಂಗಲ್ಲಿ, ಮೋಡಗಳ ಮೇಲೆ ತೇಲುತ್ತಾ ಸಭಾಂಗಣವನ್ನೇ ತಮ್ಮ ಮಾಂತ್ರಿಕ ವಯಲಿನ್ ಸಂಗೀತದ ಲೋಕಕ್ಕೆ ಸ್ವಾಗತಿಸಿ, ಶಾಸ್ತ್ರೀಯ ಹಾಗೂ ಪಾಶ್ಚಾತ್ಯ ಹಾಡುಗಳ ಶೃತಿಗಳನ್ನು, ಅಮೋಘವಾದ ಮಿಶ್ರಣದ ತುಣುಕುಗಳನ್ನು ನುಡಿಸಿ, ಪ್ರೇಕ್ಷಕರನ್ನು ರಂಜಿಸುತ್ತಿದ್ದರು.