೩೧ ಆಗಸ್ಟ್ ರಂದು ಕನ್ನಡ ಸಂಘ (ಸಿಂಗಪುರ)ದ ನೇತೃತ್ವದಲ್ಲಿ ವಚನಾಂಜಲಿ ಯನ್ನು Tessensohn ರೋಡಿನ ಸಿವಿಲ್ ಸರ್ವಿಸ್ ಕ್ಲಬ್ ನಲ್ಲಿ ಯಶಸ್ವಿಯಾಗಿ ಆಚರಿಸಲಾಯಿತು. ಕನ್ನಡ ಸಂಘದ ಅಧ್ಯಕ್ಷೆ ರಶ್ಮಿ ಉದಯಕುಮಾರ್, ಹಿರಿಯ ಗಾಯಕಿ ವಿದುಷಿ ಡಾ. ಭಾಗ್ಯಮೂರ್ತಿ, ಪ್ರಸಿದ್ಧ ಹಿಂದುಸ್ಥಾನಿ ಗಾಯಕಿ ಶ್ರೀಮತಿ ಪ್ರತಿಮಾ ಬೆಳ್ಳಾವೆ, ಮುಖ್ಯ ಅತಿಥಿಗಳಾದ ಶ್ರೀಯುತ ವಸಂತ ಕುಲಕರ್ಣಿ ಹಾಗೂ ಮೇರು ಕಲಾವಿದ ಶ್ರೀ ಕಲಾ ಸುಜಯ್ ಶಾನಭಾಗ್ ಅವರು ದೀಪ ಬೆಳಗಿಸಿದರು.
ಶ್ರೀಮತಿ ಅರ್ಚನಾ ಪ್ರಕಾಶ್ ರವರ ನಿರೂಪಣೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ಶ್ರೀಮತಿ ಭಾಗ್ಯ ಮೂರ್ತಿ ಹಾಗು ವೃಂದದವರ ವಚನಗಾಯನವು ಶ್ರೀಮತಿ ರೇಣುಕಾ ಗುಬ್ಬಿರವರ ಸುಪ್ರಭಾತದ ಗುರುವಂದನೆಯಿಂದ ಆರಂಭಿಸಿ ಅಲ್ಲಮ ಪ್ರಭುಗಳ “ಮಜ್ಜನಕ್ಕರೆದು“; ಬಸವಣ್ಣನವರ “ಚಂದ್ರೋದಯಕ್ಕೆ” ಎಂಬ ವಚನಗಳಿಗೆ ಸಾಗಿ “ಬ್ರಹ್ಮವ ಓದಿದರೇನಯ್ಯ” ಎಂಬ ರೇಣುಕಾ ಗುಬ್ಬಿ ವಿರಚಿತ ವಚನದೊಂದಿಗೆ ಮುಕ್ತಾಯವಾಯಿತು. ಶ್ರೀಮತಿ ಪ್ರತಿಮಾ ಬೆಳ್ಳಾವೆ ಹಾಗೂ ಅವರ ಶಿಷ್ಯರಿಂದ ಹನ್ನೆರಡನೆ ಶತಮಾನದ ವಚನಕಾರರಿಗೆ ಸಲ್ಲಿಸುವ ಸೇವೆ ಎಂದು ಅಲ್ಲಮ ಪ್ರಭುಗಳ “ಗಗನವೇ ಗುಂಡಿಗೆ” ಎಂಬ ವಚನದೊಂದಿಗೆ ಪ್ರಾರಂಭಿಸಿ, ಬಸವಣ್ಣನವರ “ಕಲ್ಲ ನಾಗರ ಕಂಡರೆ”, ಅಕ್ಕಮಹಾದೇವಿಯ “ಹೊಳೆವ ಕೆಂಜಡೆಗಳ” ವಚನಗಳಿಗೆ ಪ್ರವಹಿಸಿದ ಅವರ ಗಾಯನ ಬಸವಣ್ಣನವರ “ಚಕೋರಂಗೆ” ಎಂಬ ವಚನದೊಂದಿಗೆ ಸಂಪನ್ನವಾಯಿತು. ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಶ್ರೀ ವಸಂತ ಕುಲಕರ್ಣಿಯವರು “ವಚನಗಳು ಹಾಗೂ ವ್ಯಕ್ತಿತ್ವ ವಿಕಸನ“ ಎಂಬ ವಸ್ತುವಿಷಯದ ಬಗ್ಗೆ ಮಾತನಾಡುತ್ತಾ ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕೆ ಒತ್ತುಕೊಡುವ ವಚನಗಳನ್ನು ಉಲ್ಲೇಖಿಸಿದರು. ವಚನ ಪಠಣ, ಪ್ರಬಂಧ ಹಾಗೂ ಚಿತ್ರಕಲಾಸ್ಪರ್ಧೆಯ ವಿಜೇತರಿಗೆ ಪ್ರಶಸ್ತಿಗಳನ್ನು ವಿತರಿಸಲಾಯಿತು. ನಂತರ ನಡೆದ “ಅನುಭಾವದೊಳು ವಚನ” ಎಂಬ ನೃತ್ಯರೂಪಕ ಎಲ್ಲರ ಕಣ್ಣು ಮನಗಳಿಗೆ ರಸದೌತಣವುಣಿಸಿತು.
ವಿದ್ವಾನ್ ಕಲಾ ಸುಜಯ್ ಶಾನಭಾಗ್ ಹಾಗು ವೃಂದದವರು ಪ್ರಸ್ತುತಪಡಿಸಿದ ಅಮೋಘ ಕಾರ್ಯಕ್ರಮ ಗಣಪತಿ ಸ್ತುತಿಯೊಂದಿಗೆ ಆರಂಭಿಸಿ, ಆಡಿದನೋ ಮದನಾರಿ, ಜೇಡರ ದಾಸಿಮಯ್ಯ, ಅಲ್ಲಮಪ್ರಭು, ಬಸವಣ್ಣ ಹಾಗೂ ಅಕ್ಕಮಹಾದೇವಿಯವರ ವಚನಗಳ ಪ್ರಭಾವೀ ನಾಟ್ಯಾಭಿನಯದೊಂದಿಗೆ ಮುಂದುವರೆಯಿತು. ಸಿದ್ಧಗಂಗಾ ಶ್ರೀಗಳ “ಕಾಯಕ ಯೋಗಿ” ರೂಪಕ ಪ್ರಸ್ತುತ ಪಡಿಸಿದರು.